ಧಾರವಾಡ: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಐಟಿ ದಾಳಿ ನಡೆಸಿದ್ದಾರೆ. ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಧಾರವಾಡದ ದಾಸನಕೊಪ್ಪ ಸರ್ಕಲ್ನಲ್ಲಿ ಗುತ್ತಿಗೆದಾರ ಯು.ಬಿ. ಶೆಟ್ಟಿ ಅವರ ಮನೆಯಿದೆ. ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಆಪ್ತರಾದ ರಾಬರ್ಟ್ ದದ್ದಾಪುರಿ ಮತ್ತು ಆನಂದ ಜಾಧವ್ಗೆ ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಿಬ್ಬರೂ ಯು.ಬಿ. ಶೆಟ್ಟಿ ಮನೆಗೆ ಆಗಮಿಸಿದಾಗ ಅವರನ್ನೂ ಅಧಿಕಾರಿಗಳು ಮನೆಯೊಳಗೆ ಕರೆದೊಯ್ದಿದ್ದಾರೆ. ಗೋವಾದಿಂದ ಬಂದಿರುವ ಐವರು ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.
ಗುತ್ತಿಗೆದಾರ ಶೆಟ್ಟಿ 80 ನೇ ಇಸ್ವಿಯಿಂದಲೂ ಡಿಕೆ ಶಿವಕುಮಾರ್ಗೆ ಆಪ್ತರು:
ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆ ಮೇಲೆ ಐಟಿ ದಾಳಿ ಹಿನ್ನೆಲೆ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಹೇಳಿಕೆ ನೀಡಿದ್ದು ಮಾಧ್ಯಮದಲ್ಲಿ ಐಟಿ ದಾಳಿ ಸುದ್ದಿ ನೋಡಿ ಬಂದಿದ್ದೇನೆ. ನಮಗೆ ಒಳಗೆ ಹೋಗಲು ಬಿಡಲಿಲ್ಲ. ಬಳಿಕ ಶೆಟ್ಟಿ ಅವರೇ ಫೋನ್ ಮಾಡಿದರು. ಇಬ್ಬರು ಸಾಕ್ಷಿ ಬೇಕು ಅಂತಾ ಕೇಳಿದರು. ಇಬ್ಬರು ಸಾಕ್ಷಿದಾರರನ್ನು ಕೊಟ್ಟಿದ್ದೇವೆ. ಇತ್ತೀಚಿಗೆ ಅವರು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದಾರೆ. ಇತ್ತೀಚಿಗೆ ಗುತ್ತಿಗೆ ಕಾಮಗಾರಿ ಬಿಟ್ಟಿದ್ದಾರೆ. 80 ನೇ ಇಸ್ವಿಯಿಂದಲೂ ಡಿಕೆ ಶಿವಕುಮಾರ್ ಅವರೊಂದಿಗೆ ಒಡನಾಟ ಹೊಂದಿದ್ದಾರೆ. ಉಡುಪಿ, ಮಂಗಳೂರಿನಲ್ಲಿ ಚುನಾವಣೆಗೆ ಶೆಟ್ಟಿ ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯಾಗಿರಬಹುದು ಎಂದು ತಿಳಿಸಿದ್ದಾರೆ.ರಾಜ್ಯದ ಪ್ರತಿಷ್ಠಿತ ಗುತ್ತಿಗೆದಾರರಾಗಿರುವ ಯು.ಬಿ.ಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಉಪ್ಪುಂದ ಗ್ರಾಮದವರು.
ಯು. ಬಿ. ಶೆಟ್ಟಿ ಸಹೋದರನ ಮನೆಯ ಮೇಲೂ ಐಟಿ ದಾಳಿ:
ಡಿ.ಕೆ.ಶಿವಕುಮಾರ್ ಆಪ್ತ ಗುತ್ತಿಗೆದಾರ ಯು. ಬಿ. ಶೆಟ್ಟಿ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಇದೀಗ ಅವರ ಸಹೋದರನ ಮನೆಯ ಮೇಲೂ ಐಟಿ ದಾಳಿ ನಡೆದಿದೆ. ಧಾರವಾಡದ ವಿನಾಯಕ ನಗರದಲ್ಲಿರುವ ಸೀತಾರಾಮ ಶೆಟ್ಟಿ ಮನೆ ಮೇಲೆ ಕಾರಿನಲ್ಲಿ ಬಂದಿರುವ ಐದಾರು ಮಂದಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.
Discussion about this post